ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ಯುದ್ಧದ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ಅಭಾವದ ಪರಿಸ್ಥಿತಿ ಸೃಷ್ಟಿಯಾಗಿರುವ ವರದಿಗಳ ನಡುವೆ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಸಮಸ್ಯೆ ಇಲ್ಲ ಎಂದು ಆಹಾರ ಸಚಿವ ಕೆ. ಹೆಚ್. ಮುನಿಯಪ್ಪ ಬುಧವಾರ ಸ್ಪಷ್ಪಪಡಿಸಿದ್ದಾರೆ.
ನಗರದ ಆಹಾರ ಭವನದಲ್ಲಿ IOC ,BPC,HPC,GAIL ಸಂಸ್ಥೆಗಳ ಅಧಿಕಾರಿಗಳೊಂದಿಗೆ ಸಭೆ ಬಳಿಕ ಮಾತನಾಡಿದ ಸಚಿವರು, ಅರಬ್ ರಾಷ್ಟ್ರಗಳಾದ ಯುಎಸ್ಎ , ಗಲ್ಪ್ ರಷ್ಯಾದ ದೇಶಗಳಿಂದ ನಮ್ಮ ದೇಶಕ್ಕೆ ಅನಿಲ ಉತ್ಪನ್ನಗಳನ್ನು ನಾವು ಆಮದು ಮಾಡಿಕೊಳ್ಳುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುದ್ದದ ಕಾರಣದಿಂದ ಅನಿಲದ ವೆಸೆಲ್ (ಶಿಪ್ ಗಳಿಗೆ) ಹಾನಿ ಉಂಟಾದ ಹಿನ್ನಲೆಯಲ್ಲಿ ನಮಗೆ ಅನಿಲ ಸಮಸ್ಯೆ ಉಂಟಾಗಿದ್ದು ಗ್ರಾಹಕರು ಯಾವುದೆ ಆತಂಕಕ್ಕೆ ಒಳಗಾಗಬಾರದು ಎಂದರು.
ಸಾಮಾನ್ಯವಾಗಿ ಜನರು ಉಪಯೋಗಿಸುವ ಡೊಮೆಸ್ಟಿಕ್ ಗ್ಯಾಸ್ ಮತ್ತು ಕಮರ್ಷಿಯಲ್ ಗ್ಯಾಸ್ ಬಗ್ಗೆ ನಾವು ಚರ್ಚೆ ಮಾಡಿದ್ದೇವೆ. ಸುಮಾರು 1000 ಮೆಟ್ರಿಕ್ ಟನ್ ಅಂದ್ರೆ ಒಂದು ದಿನಕ್ಕೆ ಸುಮಾರು 50,000 ಕಮರ್ಷಿಯಲ್ ಸಿಲಿಂಡರ್ (19 kg) ಬೇಕಾಗುತ್ತದೆ. ಡೊಮೆಸ್ಟಿಕ್ ಬಳಕೆಗೆ ಸುಮಾರು 5,000 ಮೆಟ್ರಿಕ್ ಟನ್ ಅಂದ್ರೆ ದಿನಕ್ಕೆ ಸುಮಾರು 3,50,000 ಸಿಲಿಂಡರ್ (14.2 kg) ಬೇಕಾಗುತ್ತದೆ. ಇದು ಕರ್ನಾಟಕ ರಾಜ್ಯದ ಪ್ರತಿ ದಿನದ ಅವಶ್ಯಕತೆಯಾಗಿದೆ ಎಂದು ವಿವರಿಸಿದರು.
ಭಾರತದಲ್ಲಿ ಸುಮಾರು ಶೇ.30 ರಷ್ಟು ಮಾತ್ರ ಉತ್ಪಾದನೆ ಇದೆ. ಉಳಿದ ಶೇ. 60 ರಿಂದ 70 ರಷ್ಟನ್ನು ಆಮದು ಮಾಡಿಕೊಳ್ತಾ ಇದ್ದೀವಿ — ಅಮೇರಿಕಾ, ಗಲ್ಬ್ ಅರೇಬಿಯನ್ ಮತ್ತು ರಷ್ಯಾ ದೇಶಗಳಿಂದ ಆಮದು ಬರುತ್ತದೆ. ಈಗ ಯುದ್ಧದ ಪರಿಸ್ಥಿತಿಯಿಂದ ವೆಸಲ್ಸ್ ಬರೋದು ಸ್ವಲ್ಪ ತಡವಾಗುತ್ತಿದೆ ಎಂದು ತಿಳಿಸಿದರು.
ಜನರು ಆತಂಕ ಪಡಬೇಕಾಗಿಲ್ಲ. ಕೇಂದ್ರ ಸರ್ಕಾರದ ಸೂಚನೆಯಂತೆ ಒಂದು ಕುಟುಂಬದ ಬಳಕೆಗೆ 25 ದಿನಕ್ಕೆ ಒಂದು ಸಿಲಿಂಡರ್ ನೀಡಲಾಗುತ್ತದೆ. ಹಳ್ಳಿಗಳಾಗಲಿ, ನಗರದಲ್ಲಿರಲಿ ಜನರು ಮಿತವಾಗಿ ಗ್ಯಾಸ್ ನ್ನು ಉಪಯೋಗಿಸಬೇಕು. ತೀರಾ ಅವಶ್ಯಕತೆ ಇದ್ದದ್ದನ್ನು ಮಾತ್ರ ಬಳಸಬೇಕು. ಆತಂಕಪಟ್ಟು ಗ್ರಾಹಕರು ಹೆಚ್ಚು ಹೆಚ್ಚು ಸಿಲಿಂಡರ್ ಬುಕ್ ಮಾಡಬಾರದು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಸರ್ಕಾರ ಮತ್ತು ಆಯಿಲ್ ಕಂಪನಿಗಳ ಜೊತೆ ಸಹಕರಿಸಬೇಕೆಂದು ನಾನು ಸಾರ್ವಜನಿಕರಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದರು.
ಕಮರ್ಷಿಯಲ್ ಸಿಲಿಂಡರ್ ಬಳಕೆಯಲ್ಲಿ ಸ್ವಲ್ಪ ಕಷ್ಟವಾಗಬಹುದು. ಯಾಕಂದ್ರೆ ಮೊದಲು ಮನೆ ಬಳಕೆಗೆ ಆದ್ಯತೆ ನೀಡಲಾಗುತ್ತದೆ. ತದನಂತರ ಆಸ್ಪತ್ರೆ, ಶಾಲೆ, ಕಾಲೇಜುಗಳಿಗೆ ಸರಬರಾಜುನಲ್ಲಿ ವ್ಯತೆಯಾಗದಂತೆ ನೋಡಿಕೊಳ್ಳಬೇಕಾಗಿದೆ. ಹೋಟೆಲ್ ಕಲ್ಯಾಣ ಮಂಟಪಗಳಿಗೆ ಕಷ್ಟವಿದ್ದು ಆದ್ಯತೆಯ ಮೇರೆಗೆ ಸಿಲಿಂಡರ್ ಗಳನ್ನು ವಿತರಿಸಲಾಗುವುದು. ಈ ಕಠಿಣ ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸಲು ಸರ್ಕಾರದ ಕಾರ್ಯದರ್ಶಿ ಮಟ್ಟದಲ್ಲಿ ಪ್ರತಿವಾರ ಆಯಿಲ್ ಕಂಪನಿಗಳ ಜೊತೆ ಸಭೆ ನಡೆಯಲು ಸೂಚಿಸಿದ್ದು ಜನರು ಆತಂಕಪಡದೆ ಮಿತವಾಗಿ ಉಪಯೋಗಿಸಿದರೆ ಯಾವುದೇ ದೊಡ್ಡ ಸಮಸ್ಯೆ ಎದುರಾಗುವುದಿಲ್ಲ ಎಂದರು.
ಸಂಕಷ್ಟದ ಸಮಯದಲ್ಲಿ ಅಡಿಗೆ ಅನಿಲವನ್ನು ಮಿತವಾಗಿ ಅವಶ್ಯಕತೆ ಇದ್ದರೆ ಮಾತ್ರ ಬಳಸಬೇಕು ಎಂದು ಗ್ರಾಹಕರಲ್ಲಿ ಮನವಿ ಮಾಡಿದರು.

