ಮಧುಗಿರಿ : ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ರಸ್ತೆಯಲ್ಲಿರುವ ಶ್ರೀ ಸಿದ್ದಗಂಗಾ ಡಯಾಲಿಸಿಸ್ ಸೆಂಟರ್ ನಲ್ಲಿ ಶ್ರೀ ಸಿದ್ದಗಂಗಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ , ಶ್ರೀ ಸಿದ್ದಗಂಗಾ ಡಯಾಲಿಸಿಸ್ ಸೆಂಟರ್ ಮತ್ತು ಪಾವಗಡದ ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಮಧುಗಿರಿಯಲ್ಲಿ ಪ್ರಾರಂಭವಾಗಿ ಒಂದು ವರ್ಷದಲ್ಲಿ 1500 ಡಯಾಲಿಸಿಸ್ , 1500 ಮಂದಿಗೆ ಕಣ್ಣಿನ ತಪಾಸಣೆ ಹಾಗೂ 120 ಮಂದಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಇದರ ಜೊತೆಗೆ ಪ್ರತಿ ಎರಡನೇ ಬುಧವಾರ ಚರ್ಮ ತಪಾಸಣೆ ನಡೆಸಿ, ಉಚಿತವಾಗಿ ಔಷಧವನ್ನು ನೀಡಲಾಗುತ್ತಿದೆ ಹಾಗೂ ಆರೋಗ್ಯ ತಪಾಸಣೆ ಶಿಬಿರಗಳನ್ನು ನಡೆಸಲಾಗುತ್ತಿದೆ.
ಒಂದು ವರ್ಷದಲ್ಲಿ ಜನರ ಅನುಕೂಲಕ್ಕಾಗಿ ಆರೋಗ್ಯದ ಬಗ್ಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉಚಿತ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗುವುದು ಎಂದು ಪಾವಗಡದ ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಜಪಾನಂದ ಮಹಾರಾಜ್ ತಿಳಿಸಿದ್ದಾರೆ
ಶ್ರೀ ಸಿದ್ದಗಂಗಾ ಡಯಾಲಿಸಿಸ್ ಸೆಂಟರ್ ಕೇಂದ್ರಕ್ಕೆ ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಮಾ.23 ರಂದು ಬೆಳಿಗ್ಗೆ 11 ಗಂಟೆಗೆ ವಾರ್ಷಿಕೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ವಹಿಸಲಿದ್ದಾರೆ. ಪಾವಗಡದ ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಜಪಾನಂದ ಮಹಾರಾಜ್ ಅಧ್ಯಕ್ಷತೆಯನ್ನು ವಹಿಸುವರು. ಶಾಸಕ ಕೆ.ಎನ್.ರಾಜಣ್ಣ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ , ಡಿ.ವೈ. ಎಸ್. ಪಿ. ಮಂಜುನಾಥ್ , ಸಿದ್ದಗಂಗಾ ಸಂಸ್ಥೆಯ ಕಾರ್ಯದರ್ಶಿ ಟಿ.ಎಂ. ಸ್ವಾಮಿ , ನಿರ್ದೇಶಕ ಡಾ. ಪರಮೇಶ್ , ಪ್ರಾಂಶುಪಾಲ ಡಾ. ಶಾಲಿನಿ , ದಾನಿಗಳಾದ ರುದ್ರೇಶ್ , ವೀರೇಶ್, ಶಿವಕುಮಾರ್ , ಅನುರಾಧ ಉಮಾಶಂಕರ್ , ಅಕ್ಷಯ್ ಭಾಗವಹಿಸಲಿದ್ದಾರೆ.

